ಡಿ.30ರಂದು ಗ್ರಾಪಂ ಚುನಾವಣೆ ಫಲಿತಾಂಶ: ಮತ ಎಣಿಕೆ ಕೇಂದ್ರದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್: ಎಸ್.ಪಿ ಸೈದುಲು ಅಡಾವತ್

ಬಳ್ಳಾರಿ: ಗ್ರಾಮ ಪಂಚಾಯತಿ ಚುನಾವಣೆಯ ಮತ ಎಣಿಕೆಯು ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಡಿ.30ರಂದು ಜರುಗಲಿದ್ದು, ಮತ ಎಣಿಕೆ ಕೇಂದ್ರದ ಸುತ್ತಲೂ 200 ಮೀಟರ್ ಅಂತರದಲ್ಲಿ ಕಲಂ 144 ಸಿಎಲ್‍ಒಸಿ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಮತ ಎಣಿಕೆ ಕೇಂದ್ರದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರು ತಿಳಿಸಿದ್ದಾರೆ.
ಅಭ್ಯರ್ಥಿ ಅಥವಾ ಮತ ಎಣಿಕೆ ಏಜಂಟರಿಗೆ ಮಾತ್ರ ಮತ ಎಣಿಕೆ ಕೇಂದ್ರದೊಳಗೆ ಪ್ರವೇಶಕ್ಕೆ ಅವಕಾಶವಿದ್ದು, ಯಾವುದೇ ಸಾರ್ವಜನಿಕರಿಗೆ ಪ್ರವೇಶಕ್ಕೆ ಅವಕಾಶವಿರುವುದಿಲ್ಲ. ಕೋವಿಡ್ -19 ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮತ್ತು ಮಾಸ್ಕ್ ಧರಿಸುವುದು ಕಡ್ಡಾಯವಾಗಿರುವುದರಿಂದ ಮತ ಎಣಿಕೆ ಕೇಂದ್ರಕ್ಕೆ ಬರುವ ಪ್ರತಿಯೊಬ್ಬ ಅಭ್ಯರ್ಥಿ, ಮತ ಎಣಿಕೆ ಏಜೆಂಟ್ ಮಾಸ್ಕ್ ಧರಿಸಿ ಬರತಕ್ಕದ್ದು. ಯಾವುದೇ ತಮ್ಮ ಬೆಂಬಲಿಗರನ್ನು ಮತ ಎಣಿಕೆ ಕೇಂದ್ರದ ಹತ್ತಿರ ಕರೆದುಕೊಂಡು ಬರತಕ್ಕದ್ದಲ್ಲ. ಪ್ರತಿ ತಾಲೂಕಿನ ಉಸ್ತುವಾರಿಗಾಗಿ ಒಬ್ಬ ಡಿ.ಎಸ್.ಪಿ ರವರನ್ನು ನೇಮಿಸಿದ್ದು, ಪ್ರತಿ ಮತ ಎಣಿಕೆ ಕೇಂದ್ರದ ಹತ್ತಿರ ಸಿ.ಪಿ.ಐ., ಪಿ.ಎಸ್.ಐ, ಹಾಗೂ ಇತರೆ ಸಿಬ್ಬಂದಿಯವರು ಮತ್ತು ಒಂದು ಕೆ.ಎಸ್.ಆರ್.ಪಿ, ಒಂದು ಡಿ.ಎ.ಆರ್. ಪಾರ್ಟಿಗಳನ್ನು ಸೂಕ್ತ ಬಂದೋಬಸ್ತಗಾಗಿ ನಿಯೋಜಿಸಲಾಗಿದೆ.
ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿಯೂ ಸಹ ಹೆಚ್ಚುವರಿಯಾಗಿ ಸಿಪಿಐ, ಪಿಎಸ್‍ಐ ಹಾಗೂ ಪೆÇಲೀಸ್ ಸಿಬ್ಬಂದಿ ಯವರನ್ನು ಗ್ರಾಮಗಸ್ತಿಗೆ ನೇಮಿಸಲಾಗಿದ್ದು, ನಿರಂತರ ಗಸ್ತಿನಲ್ಲಿರುತ್ತಾರೆ. ಆದ್ದರಿಂದ ಯಾವುದೇ ವಿಜಯೋತ್ಸವ, ಮೆರವಣಿಗೆಗಳನ್ನು ನಡೆಸಬಾರದು, ಸಣ್ಣಪುಟ್ಟ ಉಲ್ಲಂಘನೆಗಳನ್ನು ಸಹ ಪರಿಗಣಿಸಿ ಅಂತಹವರ ವಿರುದ್ಧ ನಿರ್ಧಾಕ್ಷಿಣ್ಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕರು ಈ ಬಗ್ಗೆ ಯಾವುದೇ ದೂರುಗಳು ಇದ್ದಲ್ಲಿ ಕೂಡಲೇ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ಅಥವಾ ಸ್ಥಳೀಯ ಪೊಲೀಸ್ ಠಾಣೆಗಳಿಗೆ ತಿಳಿಸಬೇಕು ಎಂದು ಅವರು ಹೇಳಿದ್ದಾರೆ.
ಬಳ್ಳಾರಿ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ದೂ: 08392-258100, 258101, 257100, 257600, 9480803000

Leave a Reply

Your email address will not be published. Required fields are marked *