ಕೋವಿಡ್ 3ನೇ ಅಲೆ ನಿಯಂತ್ರಣಕ್ಕೆ ಮುಂಜಾಗ್ರತ ಕ್ರಮವಹಿಸಲು ಜಿಲ್ಲಾ ಉಸ್ತುವಾರಿ ಸಚಿವ ಆನಂದ್‍ಸಿಂಗ್ ಸೂಚನೆ

ಬಳ್ಳಾರಿ,ಜ.5: ಕೊರೊನಾ ಎರಡನೆಯ ಅಲೆಯ ಸಂದರ್ಭದಲ್ಲಿ ಆದ ಲೋಪದೋಷಗಳು
ಮರುಕಳಿಸದಂತೆ ಬಳ್ಳಾರಿ-ವಿಜಯನಗರ ಅವಳಿ ಜಿಲ್ಲಾಡಳಿತಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಪ್ರವಾಸೋದ್ಯಮ, ಪರಿಸರ, ಜೀವಿಶಾಸ್ತ್ರ, ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು ಹೇಳಿದರು.
ನಗರದದ ಬಿಡಿಎಎ ಫುಟ್‍ಬಾಲ್ ಮೈದಾನದ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡ ಕೆಡಿಪಿ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಳ್ಳಾರಿಯಲ್ಲಿ ಒಟ್ಟು 1200 ಬೆಡ್‍ಗಳು ಮತ್ತು ವಿಜಯನಗರ ಜಿಲ್ಲೆಯಲ್ಲಿ 873 ಬೇಡ್‍ಗಳ ವ್ಯವಸ್ಥೆ ಮಾಡಲಾಗಿದೆ. ಕೊವೀಡ್ ಹಾಗೂ
ಒಮಿಕ್ರಾನ್ ತಡೆಗಟ್ಟುವ ನಿಟ್ಟಿನಲ್ಲಿ ಅವಳಿ ಜಿಲ್ಲೆಯಲ್ಲಿ ಖಾಲಿ ಇರುವ ಮಕ್ಕಳ ಮತ್ತು ಸ್ತ್ರೀರೋಗ ತಜ್ಞ ವೈದ್ಯಾದಿಕಾರಿಗಳನ್ನು ನೇಮಕ ಮಾಡಿಕೋಳ್ಳಬೇಕು ಎಂದು ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಅವಳಿ ಜಿಲ್ಲೆಗಳಲ್ಲಿ ಮಕ್ಕಳ ಮೇಲೆ ಹೆಚ್ಚಿನ ಪ್ರಮಾಣದ ಸೋಂಕು ತಗುಲುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಎಲ್ಲಾ ಶಾಸಕರ ಜತೆ ಚರ್ಚಿಸಿ ಅನಿವಾರ್ಯವಾದರೆ ಜಿಲ್ಲೆಗಳಲ್ಲಿ ಶಾಲೆ ಬಂದ್ ಮಾಡಲಾಗುವುದು ಎಂದು ಹೇಳಿದರು.
ಜಿಲ್ಲಾಸ್ಪತ್ರೆ ಅಧೀಕ್ಷಕ ಡಾ.ಬಸಾರೆಡ್ಡಿ ಮಾತನಾಡಿ, ಮೊದಲ 2 ಅಲೆಯಲ್ಲಿ ಶೇ.15ರಷ್ಟು ಮರಣ ಪ್ರಮಾಣ ಇತ್ತು. ಈ ಬಾರಿ ಅಂತಹ ಸ್ಥಿತಿ ಇರಲ್ಲ ಎಂದು ಮಾಹಿತಿ ನೀಡಿದರು. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಅವಳಿ ಜಿಲ್ಲೆಯಲ್ಲಿರುವ ಸಿಬ್ಬಂದಿ ಕೊರತೆ ನಿವಾರಣೆಗೆ ಕ್ರಮ ವಹಿಸಲಾಗುವುದು ಮತ್ತು ಹೆಚ್ಚಿನ ಅವಶ್ಯಕತೆ ಇದ್ದಲ್ಲಿ ವೈದ್ಯರು, ಸಿಬ್ಬಂದಿಯವರನ್ನು ಗುತ್ತಿಗೆ ಆಧಾರದ ಮೇಲೆ ನಿಯೋಜನೆ ಮಾಡಲಾಗುವುದು ಎಂದು ತಿಳಿಸಿದರು.
ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಮಾತನಾಡಿ ಸದ್ಯ 2 ತಿಂಗಳಿಗೆ ಅವರ ಸೇವೆ ಮುಂದುವರಿಸಿದ್ದೇವೆ. ಮುಂದೆ ಅವರನ್ನೇ ಟ್ರಾಮಾಕೇರ್ ಸೆಂಟರ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸೇರಿಸಿಕೊಳ್ಳಲಾಗುವುದು ಎಂದು ಸಚಿವರಿಗೆ ಮಾಹಿತಿ ನೀಡಿದರು. , ಈಗಾಗಲೇ ಒಟ್ಟು 190 ಜನರ ಪೈಕಿ 104 ಜನರನ್ನು ಸೇವೆಗೆ ತೆಗೆದುಕೊಂಡಿದೆ. 2 ತಿಂಗಳು ಡಿಎಂಎಫ್‍ನಿಂದ ಸಂಬಳ ನೀಡಲಾಗುವುದು ಎಂದರು.
50 ಗುಣಮಟ್ಟದ ವೆಂಟಿಲೇಟರ್ಸ್ ಖರೀದಿಸಲಾಗಿದೆ. ಈಗ ಟ್ರಾಮಕೇರ್ ಸೆಂಟರ್ ನಲ್ಲಿ 96 ವೆಂಟಿಲೇಟರ್ಸ್ ಕಾರ್ಯನಿರ್ವಹಿಸುವಂತೆ ಸಿದ್ದತೆ ಮಾಡಿಕೊಂಡಿದೆ.
ವಿಜಯಗರ ಜಿಲ್ಲೆಯ ಐದು ತಾಲ್ಲೂಕಿನ ಆಕ್ಸಿಜನ್ ಘಟಕಕ್ಕೆ ಜನರೇಟರ್ ಖರೀದಿಸಲು ಸರ್ಕಾರದ ಮಂಜೂರಾತಿ ಕೊಡಿಸಲು ಡಿಎಚ್‍ಒ ಡಾ. ಜನಾರ್ಧನ್ ಜಿಲ್ಲಾ ಸಚಿವರಿಗೆ ಮನವಿ ಮಾಡಿದರು.
ಆಯುಷ್ ಇಲಾಖೆಯಲ್ಲಿ ಒಂದು ಲಕ್ಷ ಜನರಿಗೆ ಆಗುವಷ್ಟು ಔಷಧಿ ಇದೆ. ಅದನ್ನು ವಿತರಿಸಲು ಎನ್.ಜಿ.ಓ.ಗಳ ನೆರವಿನ ಅವಶ್ಯಕತೆ ಇದ್ದು, ಕಲ್ಪಿಸಬೇಕು ಎಂದು ಸಭೆಯಲ್ಲಿದ್ದ ಜಿಲ್ಲಾ ಆಯುಷ್ ಅಧಿಕಾರಿ ಡಾ.ಸುಜಾತ ಪಾಟೀಲ್ ಕೋರಿದರು.
ಸಚಿವರು ಪ್ರತಿಕ್ರಿಯಿಸಿ ಅಂಗನವಾಡಿ, ಆಶಾ ಕಾರ್ಯಕರ್ತರ ಸಹಾಯ ಪಡೆದು ವಿತರಿಸಲು ಕ್ರಮವಹಿಸಬೇಕು ಎಂದರು.
ಸಭೆಯಲ್ಲಿ ಸಂಸದ ವೈ.ದೇವೇಂದ್ರಪ್ಪ, ವಿಜಯನಗರ ಜಿಲ್ಲಾಧಿಕಾರಿ ಅನಿರುಧ್ ಶ್ರವಣ್, ಜಿಪಂ ಸಿಇಒಗಳಾದ ನಂದಿನಿ ಹಾಗೂ ಹರ್ಷಲ್ ಬೋಯೆಲ್ ನಾರಾಯಣ ರಾವ್, ಅವಳಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸೈದುಲು ಅಡಾವತ್, ಅರುಣ್, ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡರು.
*****

Leave a Reply

Your email address will not be published. Required fields are marked *