ಬಳ್ಳಾರಿ, ಜೂ. 22: ಮೌಲ್ಯಯುತ ವಿಚಾರಗಳು ಮಾನವನ ಪ್ರಗತಿಗೆ ಪೂರಕ ಎಂದು ಬಳಗಾನೂರು ಶಿವಶಾಂತವೀರ ಶರಣರು ತಿಳಿಸಿದರು.
ಚಿಕೇನಕೊಪ್ಪದ ಶ್ರೀ ಚನ್ನವೀರ ಶರಣರ 30ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ 1008 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಪರಮ ಪೂಜ್ಯ ಶ್ರೀ ಶಿವಶಾಂತವೀರ ಶರಣರ ತುಲಾಬಾರ ಹಾಗೂ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರಕ್ಕೆ ನಗರದ ಬಸವಭವನದಲ್ಲಿ ಭಾನುವಾರ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.
ಮಹಾತ್ಮರು, ಶರಣರು, ಸಾಧುಗಳು ಮತ್ತು ಸಂತರ ಬದುಕಿನಲ್ಲಿ – ನುಡಿಗಳಲ್ಲಿ ಮೌಲ್ಯಗಳು – ಆದರ್ಶಗಳು ಮತ್ತು ಸಂಸ್ಕಾರಗಳು ಅಡಗಿರುತ್ತವೆ. ಮುಗ್ಧವಾದ ಭಕ್ತಿ, ಶ್ರದ್ಧೆಯ ಸ್ಮರಣೆ, ವಿಶ್ವಾಸಗಳಿಂದ ಮಹಾತ್ಮರನ್ನು – ಶರಣರನ್ನು ಸ್ಮರಿಸಿದಲ್ಲಿ ಬದುಕು ಸಾರ್ಥಕತೆಯನ್ನು ಪಡೆಯುತ್ತದೆ ಎಂದರು.
ಶರಣರು ಕಾಡು ಸೇರಿ ಸಾಧನೆ ಮಾಡಿದವರಲ್ಲ. ನಾಡಿನಲ್ಲಿ, ಜನರೊಂದಿಗೆ ಇದ್ದು ಸಾಧನೆಯನ್ನು ಮಾಡಿ ಸದ್ಗತಿಯನ್ನು ಸಾಧಿಸಿದವರು. ಗುರುವಿಗೆ ಶರಣಾದೊಡೆ ಸಾಧನೆ ಮತ್ತು ಯಶಸ್ಸು ಹಿಂಬಾಲಿಸುತ್ತವೆ. ಜೀವನದ ಸಾರ್ಥಕತೆಗೆ ಮಾನವೀಯತೆ, ಸೇವೆ, ತ್ಯಾಗ, ಕಾಯಕ ಅತಿ ಅಗತ್ಯ ಎಂದರು.
ಯರನಾಳ ಹಿರೇಮಠ ಸಂಸ್ಥಾನದ ಶಿವಪ್ರಸಾದ ದೇವರು ಅವರು, ತಾಯಿಯೇ ದೇವರು. ಭೂಮಿಗಿಂತಲೂ ದೊಡ್ಡದ್ದು ತಾಯಿ. ತಾಯಿಯ ಸೇವೆಯನ್ನು ಮಾಡುವುದು ಸಾಕ್ಷಾತ್ ದೇವರ ಸೇವೆಯನ್ನು ಮಾಡಿದಂತೆ. ಚಿಕೇನಕೊಪ್ಪದ ಚನ್ನವೀರ ಶರಣರು ಮಾತೆಯರನ್ನು ಗೌರವಿಸಲು – ಅಭಿನಂದಿಸಲಿಕ್ಕಾಗಿಯೇ ಉಡಿ ತುಂಬುವ ಕಾರ್ಯವನ್ನು ಪ್ರಾರಂಭಿಸಿದ್ದಾರೆ ಎಂದರು.
ಇಂದಿನ ದಿನಗಳಲ್ಲಿ ವಿದ್ಯೆ ಎಲ್ಲರಿಗೂ ಸಿಕ್ಕಿದ್ದು, ವಿನಯ ಮಾಯವಾಗಿದೆ. ವಿಜ್ಞಾನ ಅಭಿವೃದ್ಧಿ ಸಾಧಿಸಿದ್ದು ಅಜ್ಞಾನ ಪರಮಾವಧಿಯನ್ನು ತಲುಪಿದೆ. ಈ ನಿಟ್ಟಿನಲ್ಲಿ ಇಂದಿನ ಯುವಶಕ್ತಿಗೆ ವಿದ್ಯೆ, ವಿಜ್ಞಾನ, ವಿನಯ ಮತ್ತು ಪರಸ್ಪರರನ್ನು ಗೌರವಿಸುವ ಸಂಸ್ಕಾರವನ್ನು ಕಲಿಸಬೇಕಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಅವರು, ಚಿಕೇನಕೊಪ್ಪ ಚನ್ನವೀರ ಶರಣರು ನಡೆದಾಡುವ ದೇವರು. ಅವರ ತಪಸ್ಸಿನ ಸಾಧನೆ – ದೈವೀ ಶಕ್ತಿ ನಮ್ಮನ್ನೆಲ್ಲರನ್ನೂ ಇಲ್ಲಿ ಒಗ್ಗೂಡಿಸಿದೆ ಎಂದರು. ಪತ್ರಕರ್ತ ಹೆಚ್.ಎಂ. ಮಹೇಂದ್ರ ಕುಮಾರ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕುಮಾರಿ ಈಶ್ಚರಿ ಮತ್ತು ಕುಮಾರಿ ತೇಜಸ್ವಿನಿ ಅವರು ಪ್ರಾರ್ಥಿಸಿದರು. ಪಂಡಿತ ಶಿವಲಿಂಗಶಾಸ್ತ್ರಿಗಳು ಸ್ವಾಗತಿದರು. ಉಪನ್ಯಾಸಕ ಬಸವರಾಜ ಅಮಾತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಬಿ. ಸಿದ್ದಲಿಂಗಪ್ಪ ಅವರು ನಿರೂಪಿಸಿದರು. ಶರಣ ಕುಮಾರ್ ಕೊತ್ತಲಚಿಂತ ಮತ್ತು ಸುಧಾಕರ ಅವರು ಸಂಗೀತ ಸೇವೆ ಸಲ್ಲಿಸಿದರು. ಸಾಧಕ ಗಣ್ಯರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ತುಲಾಭಾರ ಸೇವೆಯನ್ನು ಗುರು ಕಂಪ್ಯೂಟರ್ಸ್ನ ಶ್ರೀಮತಿ ಪೂಜಾ – ಮೃತ್ಯುಂಜಯ ಬಾಬು ಹಾಗೂ ಕುಟುಂಬ, ಶ್ರೀಮತಿ ಜುನ್ನಾ ಅಮೃತ – ಜುನ್ನಾ ಬಸವರೆಡ್ಡಿ ಕುಟುಂಬ, ಶ್ರೀಮತಿ ಧರಣಿ. ಡಿ, ಶಿವರಾಂ .ಟಿ, ನಾಗರಾಜ .ಡಿ, ಹಾಗೂ ಸೋಮಶೇಖರ್.ಡಿ ಕುಟುಂಬ, ಶ್ರೀಮತಿ ಕರಿನಾಗಶೆಟ್ರು ಸುಮಂಗಳ ಚನ್ನಪ್ಪ ಕುಟುಂಬ, ಸಿದ್ದಲಿಂಗಮ್ಮ ಹಾಗೂ ಮಕ್ಕಳಾದ ತಿಪ್ಪೇಸ್ವಾಮಿ, ಕರಿಬಸಪ್ಪ, ಲತಾ, ಪುಷ್ಪ, ಹಾಗೂ ಕುಟುಂಬ, ಶ್ರೀಧರಗಡ್ಡೆಯ ದಿವಂಗತ ಲದ್ದೆ ಸಿದ್ದರಾಮಪ್ಪ ಇವರ ಧರ್ಮಪತ್ನಿ ಲದ್ದೆ ಸಿದ್ದವೀರಮ್ಮ ಮತ್ತು ಮಕ್ಕಳು, ಜಿ. ಶಕುಂತಲಾ ಗಂಡ ದಿವಂಗತ ಜಿ. ಮಲ್ಲಿಕಾರ್ಜುನ ಹಾಗೂ ಶ್ರೀಮತಿ ಜಿ. ಸುನೀತ, ಜಿ. ರಘುನಾಥ್ ಮತ್ತು ಮಕ್ಕಳು, ಸಂಗನಕಲ್ಲುನ ಶ್ರೀಮತಿ ಮಂಗಳ ಮತ್ತು ನಿಜಲಿಂಗಯ್ಯ ಸ್ವಾಮಿ ಹಾಗೂ ವಿದ್ಯಾಶ್ರೀ, ಶ್ರೀಮತಿ ಹೆಚ್. ಕಿರಣ – ಹೆಚ್.ಎನ್. ಗಿರೀಶ ಹಾಗೂ ಡಾ. ಹೆಚ್.ಎನ್. ಶಿವರರಣ, ಕೊಟ್ಟೂರು, ಕಮ್ಮರಚೇಡುನ ಶ್ರೀಮತಿ ಜಾನಕುಂಟೆ ರಾಜಮ್ಮ ಜಾನಕುಂಟೆ ತಿಪ್ಪೇರುದ್ರಪ್ಪ ಹಾಗೂ ಕುಟುಂಬ, ಕೆ. ವಿಜಯಗಣೇಶ್ ಕುಮಾರ್ ಹಾಗೂ ಕುಟುಂಬ, ಶ್ರೀಮತಿ ವಿದ್ಯಾಶ್ರೀ ಮತ್ತು ಶಿವಶಂಕರಗೌಡ, ಪೊಲೀಸ್ ಪಾಟೀಲ್ ಕುಟುಂಬ ಅವರು ನೆರವೇರಿಸಿದರು.
—–