
ಬಳ್ಳಾರಿ, ಅ.31: ಪಕ್ಷದ ಹೈಕಮಾಂಡ್, ರಾಜ್ಯ ಹಾಗೂ ಜಿಲ್ಲಾ ನಾಯಕರ ಸರ್ವಾನುಮತದ ಅಭ್ಯರ್ಥಿ ಮೇಯರ್ ಆಗಿ ಆಯ್ಕೆಯಾಗಿದ್ದಾರೆ ಎಂದು ಬಳ್ಳಾರಿ ನಗರ ಕ್ಷೇತ್ರದ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಶುಕ್ರವಾರ ನಗರದ 23ನೇ ವಾರ್ಡಿನಲ್ಲಿ ಮನೆ ಮನೆಗೂ ಭರತ್ – ಸಲಾಂ ಬಳ್ಳಾರಿ ಅಭಿಯಾನ ಆರಂಭಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಕಿಚನ್ ಕಿಟ್ ವಿತರಣೆಯನ್ನು ವಿದ್ಯುಕ್ತವಾಗಿ ಆರಂಭಿಸಲಾಯಿತು.
ಕಾಂಗ್ರೆಸ್ಸಿನಲ್ಲಿ ಗುಂಪುಗಾರಿಕೆಗೆ ಅವಕಾಶ ಇಲ್ಲ, ಹೈಕಮಾಂಡ್ ತೀರ್ಮಾನಿಸುವ ಅಭ್ಯರ್ಥಿಯ ಮೇಯರ್ ಆಗುತ್ತಾರೆ, ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ಮೇಯರ್ ಸ್ಥಾನ ಕೇಳುವುದು ತಪ್ಪೇನಲ್ಲ, ಶಾಸಕರು ಸಂಸದರು ಒಗ್ಗೂಡಿ ಅರ್ಹ ವ್ಯಕ್ತಿಯನ್ನು ಮೇಯರ್ ಆಗಿ ಆಯ್ಕೆ ಮಾಡುತ್ತೇವೆ. ಈ ವಿಚಾರದಲ್ಲಿ ನಮ್ಮ ಹಾಗೂ ನಾಯಕರ ನಡುವೆ ಭಿನ್ನಾಭಿಪ್ರಾಯ ಇಲ್ಲ ಎಂದರು.
ಈಗಾಗಲೇ ಭರವಸೆ ನೀಡಿರುವಂತೆ ಮನೆ ಮನೆಗೂ ಭರತ್ ಅಭಿಯಾನದ ಮೂಲಕ ನನ್ನ ಜನ್ಮ ದಿನದ ಹಿನ್ನೆಲೆಯಲ್ಲಿ ಬಳ್ಳಾರಿಯ 1.10 ಲಕ್ಷ ಮನೆಗಳಿಗೆ ಕಿಚನ್ ಕಿಟ್ ವಿತರಿಸುವ ಕಾರ್ಯ ವಿದ್ಯುಕ್ತವಾಗಿ ಆರಂಭಿಸುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ವಕ್ತಾರ ವೆಂಕಟೇಶ ಹೆಗಡೆ, ವಾರ್ಡಿನ ಪಾಲಿಕೆಯ ಸದಸ್ಯ ಪಿ.ಗಾದೆಪ್ಪ, ಮಾಜಿ ಮೇಯರ್ ಎಂ.ರಾಜೇಶ್ವರಿ, ಸದಸ್ಯರಾದ ಪ್ರಭಂಜನಕುಮಾರ್, ಕುಬೇರಾ, ರಾಮಾಂಜನೇಯ, ನೂರ್ ಮೊಹಮ್ಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಭಿಲಾಶ್, ಸ್ಥಳೀಯ ಮುಖಂಡರಾದ ಸೋಮಣ್ಣ, ಗೌತಮ್, ವಿಜಯ್, ಮಹೇಂದ್ರ, ಶ್ರೀಕಾಂತ್, ಮಹಿಳಾ ಮುಖಂಡರಾದ ಪದ್ಮಾ, ಚಂಪಾ ಚವ್ಹಾಣ್, ಉದ್ಯಮಿ ಶ್ರೀಧರ್ ಸೇರಿದಂತೆ ಹಲವರು ಹಾಜರಿದ್ದರು.

ಸ್ಥಳೀಯರು ವಿವಿಧ ಸಮಸ್ಯೆಗಳ ಬಗ್ಗೆ ಶಾಸಕರಿಗೆ ಅಹವಾಲು ಸಲ್ಲಿಸಿದರು. ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ಶಾಸಕ ನಾರಾ ಭರತ್ ರೆಡ್ಡಿ ಸಮಸ್ಯೆ ಪರಿಹರಿಸುವಂತೆ ಸೂಚನೆ ನೀಡಿದರು.
