ರಾಯಚೂರು ಪಕ್ಷಿಗಳ ಫೋಟೋ ಪ್ರದರ್ಶನ: ಪಕ್ಷಿಗಳು ಉತ್ತಮ ಪರಿಸರಕ್ಕೆ ಪೂರಕ -ರಾಜೇಶ್ ನಾಯಕ್

ರಾಯಚೂರು, ಜ.17: ಪಕ್ಷಿಗಳು ಉತ್ತಮ ಪರಿಸರದ ಸಂಕೇತವಾಗಿವೆ. ಅವು ಪರಿಸರದ ಪೂರಕ ವಾತಾವರಣ ನಿರ್ಮಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ಎಂದು ವಲಯ ಅರಣ್ಯ ಅಧಿಕಾರಿಗಳಾದ ರಾಜೇಶ್ ನಾಯಕ ಅವರು ಹೇಳಿದರು.
ಪ್ರಯತ್ನ ವೆಲ್ ಫೇರ್ ಟ್ರಸ್ಟ್ ನವರು ಟಾಗೋರ್ ಸಭಾಂಗಣದಲ್ಲಿ ಏರ್ಪಡಿಸಿದ್ದ  ಸಾಹಿತಿ ಈರಣ್ಣ ಬೆಂಗಾಲಿ ಅವರು ತೆಗೆದ ನೂರ ಐವತ್ತಕ್ಕೂ ಹೆಚ್ಚು ರಾಯಚೂರು ಪಕ್ಷಿಗಳ ಫೋಟೋ ಪ್ರದರ್ಶನವನ್ನು ಉದ್ಘಾಟಸಿ ಅವರು ಮಾತನಾಡಿದರು.                                              ಪಕ್ಷಿಗಳು ಭೂ ಲೋಕದ ಅದ್ಬುತ ಜೀವಿಗಳಾಗಿ, ಮನುಕುಲಕ್ಕೆ ಸಹಕಾರಿ ಆಗಿವೆ. ವಿದ್ಯಾರ್ಥಿಗಳು, ಸಾರ್ವಜನಿಕರು ಪಕ್ಷಿಗಳನ್ನು ಉಳಿಸುವತ್ತ ಗಮನಹರಿಸಬೇಕು ಎಂದು ತಿಳಿಸಿದರು.                ಪಕ್ಷಿಗಳ ಛಾಯಾಗ್ರಾಹಕ ಈರಣ್ಣ ಬೆಂಗಾಲಿ ಅವರು ಮಾತಾಡಿ,  ರಾಯಚೂರಿನಲ್ಲಿ ಇನ್ನೂರಕ್ಕೂ ಅಧಿಕ ಪ್ರಬೇಧದ ಹಕ್ಕಿಗಳು ಇದ್ದು, ಅವುಗಳನ್ನು ಉಳಿಸಿಕೊಂಡು ಹೋಗುವ ಪ್ರಯತ್ನ ಆಗಬೇಕು. ಜನರು ಹಕ್ಕಿಗಳ ಬಗ್ಗೆ ಒಲವನ್ನು ಹೊಂದಿ, ಪಕ್ಷಿಗಳ ಮಹತ್ವ ಅರಿಯಬೇಕು ಎಂದರು.

ಅಧ್ಯಕ್ಷತೆಯನ್ನು ವಹಿಸಿದ ಅಭಿಜ್ಞಾನ ಶಾಲೆಯ ರಮೇಶ್ ಅವರು,   ಈರಣ್ಣ ಬೆಂಗಾಲಿ ಅವರು ರಾಯಚೂರಿನ ಪಕ್ಷಿಗಳ ಫೋಟೋ ತೆಗೆದು ನಮಗೆ ತೋರಿಸಿದ್ದು ಅಭಿನಂದನೀಯ. ಪರಿಸರ ಕಾರ್ಯಕ್ಕೆ ನಾವು ಯಾವಾಗಲೂ ಜೊತೆ ಇರಬೇಕು. ಉತ್ತಮ ಪರಿಸರವನ್ನು ನಾವು ಕಾಪಾಡುವಲ್ಲಿ ಗಮನಹರಿಸಬೇಕು. ಪಕ್ಷಿಗಳು ಇರದಿದ್ದರೆ ನಾವಿಲ್ಲ ಎಂಬುದನ್ನು ಮರೆಯಕೂಡದು ಎಂದರು.

ಈ ಸಂದರ್ಭದಲ್ಲಿ ಮೊಹಿಯುದ್ದೀನ್ ಪೀರಜಾದೆ, ವೀರಹನುಮಾನ, ನೀಲಕಂಠ ಮಳಿಮಠ, ಈರಣ್ಣ ಕೋಸಗಿ, ಹಫಿಜುಲ್ಲಾ, ಬಶೀರ ಅಹ್ಮದ ಹೊಸಮನಿ, ಪ್ರಭಣ್ಣಗೌಡ, ಬಸವಂತರಾಯ ಪಾಟೀಲ, ಸಲಾವುದ್ದಿನ್, ಅಜೃಯ್, ಮುನಿಸ್ವಾಮಿ, ಯಲ್ಲಪ್ಪ ಮರ್ಚೆಡ್ ಸೇರಿದಂತೆ ಅಭಿಜ್ಞಾನ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪಕ್ಷಿಗಳ ಫೋಟೋ ಪ್ರದರ್ಶನ ರವಿವಾರವೂ ಇರುತ್ತದೆ.
—–